Follow on Twitter

Search it

Saturday 19 March 2016

ಸಾತೊಡ್ಡಿ ಜಲಪಾತದ ವಿಡಿಯೋ ತುಣುಕು | Sathodi Falls, Yellapur


ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪವಿರುವ ಸಾತೊಡ್ಡಿ ಜಲಪಾತದ ತುಣುಕು ಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದು ನೋಡಿThis video is from Mahesh Malnad's Video Gallery: Watch glimpse of Sathodi Falls in Uttara Kananda district, Karnataka, India. Nearest town is Yellapura(23-25 KM). The Waterfalls is about 15 meters tall. The stream from this falls flows into backwaters of Kali River.

Subscribe to channel : https://www.youtube.com/channel/UCY9MWRSaqEExW53y7B_7x_w





Saturday 11 February 2012

ಚಾರಣಕ್ಕೂ ಮುನ್ನ ಒಮ್ಮೆ ಓದಿ...


ಕುಮಾರ ಪರ್ವತದಂತೆ..ಒಂಭತ್ತು ಗುಡ್ಡ ಕೂಡಾ ಎಲ್ಲಾ ಟ್ರೆಕರ್ಸ್ ಗಳು ಒಂದಲ್ಲ ಒಂದು ವೀಕೆಂಡ್ ಚಾರಣ ಮಾಡಬಯಸುವ ತಾಣ. ಅಲ್ಲಿನ ನಿಸರ್ಗ ಎಷ್ಟು ರಮಣೀಯವೋ ಅಷ್ಟೇ ನಿಗೂಢತೆಯಿಂದ ಕೂಡಿದೆ. ಅದೇ ನಿಗೂಢತೆ, ದಟ್ಟ ಕಾಡಿನ ಪರಿಸರದಿಂದಾಗಿ ಇಂದಿಗೂ ಅಲ್ಲಿ ಜೀವ ಸಂಕುಲ ನೆಮ್ಮದಿಯಿಂದ ಇದೆ. ಆದರೆ, ಚಾರಣದ ನೆನಪಲ್ಲಿ ಮೋಜು ಮಸ್ತಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಟ್ರಿಕ್ಕಿಂಗ್ ಮನಸ್ಸಿಗೆ  ಮುದ ನೀಡುವುದಲ್ಲದೆ ಮನಸನ್ನು ಜಾಗೃತ ಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ.

ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ ಸಾವಿನ ನಂತರ ಒಂದಷ್ಟು ಕಾಲ ಕನಿಷ್ಠವೆಂದರೂ ಆರು ತಿಂಗಳು ಕಾಲ ಅರಣ್ಯದಲ್ಲಿ ನಗರವಾಸಿಗಳ ಸುಳಿವಿರುವುದಿಲ್ಲ. ಸ್ಥಳೀಯ ಯುವಕರು ಕಾಡಲ್ಲಿ ಅಲೆದರೂ ಅದು ಟೆಕ್ಕಿಂಗ್ ಎನಿಸುವುದಿಲ್ಲ ಹಾಗಾಗಿ ಅರಣ್ಯ ಇಲಾಖೆ ಕಠಿಣ ಕ್ರಮ ತಾತ್ಕಾಲಿಕವಾಗಿ ಒಂದಷ್ಟು ಕಾಲಘಟ್ಟದ ನಂತರ ಮುರಿದು ಬೀಳುತ್ತೆ.

ಯಾವುದೇ ಚಾರಣವಾದರೂ ಪೂರ್ವ ತಯಾರಿ ಇಲ್ಲದೆ ಹೋಗುವುದು ಬುದ್ಧಿವಂತರ ಲಕ್ಷಣವಲ್ಲ, ಅಲ್ಲದೆ ಅಪಾಯಕಾರಿ ಕೂಡಾ. ಎಷ್ಟೋ ಬೆಟ್ಟ ಗುಡ್ಡ ಸುತ್ತಿ ಬಂದಿದ್ದರೂ ಹೊಸದೊಂದು ಬೆಟ್ಟ ಹತ್ತಲು ಹೊರಟಾಗ ಅನುಭವಿ ಟ್ರೆಕ್ಕರ್ಸ್ ಗಳ ಹಿತನುಡಿ ಕೇಳುವುದು ವಾಡಿಕೆ. ಅದು ಅವಶ್ಯ ಕೂಡಾ. ಬೆಂಗಳೂರಿನಲ್ಲಿ ಈಗ ಟ್ರೆಕ್ ಆಯೋಜಿಸುವ ಸಂಸ್ಥೆಗಳಿಗೇನು ಕಮ್ಮಿಯಿಲ್ಲ. ಬಿಎಂಸಿ ಆಗಲಿ, ಬೆಂಗಳೂರು ಅಸೆಂಡರ್ಸ್ ಸಂಸ್ಥೆಗಳಾಗಲಿ ಅಥವಾ ಪರಿಸರ ಪ್ರೇಮಿ ಅರುಣ್, ರಾಜೇಶ್ ನಾಯ್ಕರಂಥ ಅನುಭವಿಗಳಾಗಲಿ ಚಾರಣ ಪ್ರಿಯರಿಗೆ ಅಗತ್ಯ ಮಾಹಿತಿ, ಸಲಹೆ ನೀಡುತ್ತಾ ಬಂದಿದ್ದಾರೆ.

ಪ್ರಕೃತಿಯ ದೈತ್ಯಶಕ್ತಿಯ ಮುಂದೆ ನಾವು ತೃಣಕ್ಕೆ ಸಮಾನ ಎಂಬ ಸಮಾನ್ಯ ಕಲ್ಪನೆ ಚಾರಣಿಗರಿಗೆ ಇದ್ದರೆ ಒಳ್ಳೆಯದು. ಇನ್ನು ಟ್ರೆಕ್ ಮಾಡಬೇಕಾದ ಪರಿಸರದ ಸ್ಥೂಲ ಸೂಕ್ಷ್ಮ ಪರಿಕಲ್ಪನೆ ಕೂಡಾ ಮುಖ್ಯ. ಟ್ರೆಕ್ ಗೆ ಹೋಗುವ ಮೊದಲು ಮನೆಯವರ ಅನುಮತಿ ಅಗತ್ಯ. ಆ ಪ್ರದೇಶದಲ್ಲಿ ತಿರುಗಾಡಲು, ನೆಲೆಸಲು ಅರಣ್ಯ ಇಲಾಖೆ ಅನುಮತಿ ಇದೆಯೇ? ಯಾವ ಕಾಲದಲ್ಲಿ ಹೋಗಬಹುದು? ಎಂಬುದನ್ನು ನೋಟ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕಾಡಿನಲ್ಲಿ ಒಂದು ಮರದ ತೊಗಟೆ ಕೀಳುವುದು ಅಪರಾಧ. ಇದು ಟ್ರೆಕರ್ಸ್ ಗಳಿಗೆ ಮಾತ್ರವಲ್ಲ. ಕಾಡಿನ ಆಸುಪಾಸಿನಲ್ಲಿ ನೆಲೆಸಿರುವ ಜನರಿಗೂ ಅನ್ವಯಿಸುತ್ತದೆ. ಮನೆ ಮುಂದಿನ ಮರ ಕಡಿದು ಕಿಟಕಿ ಬಾಗಿಲಿಗೆ ಹೊಂದಿಸುವುದು ಕಷ್ಟ. ಅನುಮತಿ ಇಲ್ಲದೆ ಕಾಡಿನಲ್ಲಿ ಅಲೆಯುವಂತಿಲ್ಲ.

ಏನು ಮಾಡಬೇಕು?: ಮಲ್ಲೇಶ್ವರಂ ಬಳಿ ಅರಣ್ಯ ಭವನದಲ್ಲಿ ಟ್ರೆಕ್ ಟೀಮ್ ಬಗ್ಗೆ ಮಾಹಿತಿ ದಾಖಲಿಸಿ ಅನುಮತಿಗೆ ವಿನಂತಿಸಬಹುದು. ಬ್ಲಾಗ್, ಗೂಗಲ್ ಅಥವಾ ಮೇಲೆ ಹೇಳಿದ ಸಂಸ್ಥೆ ಅಥವಾ ವ್ಯಕ್ತಿಗಳ ಸಹಾಯ ಪಡೆದು ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯಬಹುದು. ಗೈಡ್ ಇಲ್ಲದೆ ದುರ್ಗಮ ಅರಣ್ಯ ಪ್ರದೇಶಕ್ಕೆ ಕಾಲಿಡುವುದು ಒಳ್ಳೆಯದಲ್ಲ. ಪ್ರತಿ ಗುಂಪಿನಲ್ಲೂ ನುರಿತ ಚಾರಣಿಗರಿಬ್ಬರನ್ನು ಆರಿಸಬೇಕು. ಒಬ್ಬ ಮುಂಬದಿಯಲ್ಲಿ ಗೈಡ್ ಜೊತೆ ಸಾಗುತ್ತಿದ್ದರೆ ಉಳಿದವರನ್ನು ಇನ್ನೊಬ್ಬ ಗುಂಪಿನ ಹಿಂಬದಿಯಿಂದ ಹುರಿದುಂಬಿಸುತ್ತಾ ಮುಂದಕ್ಕೆ ಕರೆದೊಯ್ಯಬೇಕು.

ಗೈಡ್, ರೂಟ್ ಮ್ಯಾಪ್, ಜಿಪಿಎಸ್ ಸಾಧನ, ಬೈನ್ಯಾಕುಲರ್ಸ್, ಒಂದೊಳ್ಳೆ ಜೊತೆ ಶೂ, ಬಣ್ಣದ ಅಂಗಿಗಳು(ಕಳೆದು ಹೋದಾಗ ಹುಡುಕಲು ಅನುಕೂಲಕರ!), ಟೆಂಟ್, ಸ್ಲೀಪಿಂಗ್ ಬ್ಯಾಗ್, ಅಡುಗೆ ಸಾಧನಗಳು, ಸ್ವಿಸ್ ನೈಫ್, ಹಗ್ಗ, ಸಣ್ಣ ಕತ್ತಿ, ಕ್ಯಾಪ್, ನೀರನ ಬಾಟಲಿ, ಲೈಟರ್, ಟಾರ್ಚುಗಳು, ದಿಕ್ಸೂಚಿ, ಫಸ್ಟ್ ಎಡ್ ಕಿಟ್, ..ಪಟ್ಟಿ ದೊಡ್ಡ ದಾಗುತ್ತದೆ. ಜೊತೆಗೆ ನೆಟ್ವರ್ಕ್ಸ್ ಸಿಗಬಲ್ಲ ಮೊಬೈಲ್, ವಾಕಿಟಾಕಿ ಕೂಡಾ ಅವಶ್ಯ ಎನಿಸುತ್ತದೆ. ಆದರೆ, ಸಮಯಪ್ರಜ್ಞೆ ಎಂಬ ಮಹತ್ಸಾಧನ ಬೇಕೇ ಬೇಕು.

ಆದರೆ, ಮುಖ್ಯವಾಗಿ ಶಿರಾಡಿ ಘಾಟಿನಿಂದ ಮೂಡಿಗೆರೆ ತನಕ ಹಾದುಕೊಂಡಿರುವ ಅರಣ್ಯದಲ್ಲಿ ಅನೇಕ ಕಡೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಆಗ ಜೊತೆಗೆ ಕರೆದೊಯ್ಯುವ ಮಾರ್ಗದರ್ಶಿಯ ನಿರ್ದೇಶನವನ್ನೇ ಅನುಸರಿಸಬೇಕಾಗುತ್ತದೆ. ಸರ್ವೇ ಆಫ್ ಇಂಡಿಯಾದವರು ಈ ಅರಣ್ಯ ಪ್ರದೇಶಗಳ ವಿವರಣಾತ್ಮಕ ನಕಾಶೆ ಕಡಿಮೆ ಬೆಲೆಗೆ ನೀಡುತ್ತಾರೆ. ಆದರಲ್ಲಿ(ಮ್ಯಾಪ್ ಸಂಖ್ಯೆ 48/p/9/nw) ಒಂಭತ್ತು ಗುಡ್ಡ ಅಲ್ಲದೆ, ಪಾಂಡವರ ಗುಡ್ಡ, ದೀಪದ ಕಲ್ಲು, ಜೇನುಕಲ್ಲು ಬೆಟ್ಟ, ಸಿಸಿಲಕಲ್ ಬೆಟ್ಟ, ಅಮೇದಿಕಲು ಬೆಟ್ಟ, ರಕಾಸ್ಕಲ್ ಬೆಟ್ಟ, ಕುಂಜನಕೆರೆ ಬೆಟ್ಟ, ಮಾರನಕೆರೆ ಗುಡ್ಡ..ಇತ್ಯಾದಿ ಸಿಗುತ್ತದೆ 597 ಮೀ ಎತ್ತರದಿಂದ 1197 ಮೀಟರ್ ತನಕ ಪರ್ವತ ಶ್ರೇಣಿ ಇದೆ. ಇಲ್ಲಿ ಆನೆ, ಹುಲಿ, ಚಿರತೆ, ಕಾಟಿ, ಕಬ್ಬೆಕ್ಕು, ಕಾಡು ನಾಯಿ..ಇತ್ಯಾದಿ ವನ್ಯಜೀವಿಗಳ ದರ್ಶನ ಭಾಗ್ಯ ಸಿಗಬಹುದು.

ಚಾರಣದಲ್ಲಿ ಅನೇಕ ನಿಸರ್ಗ ನಿರ್ಮಿತ ಜಲಪಾತಗಳು ಹೊಂಡಗಳು, ಅಡ್ಡಹೊಳೆ, ಆತ್ತ ಕಡೆ ಕೆಂಪುಹೊಳೆ ಸೇರಿದಂತೆ ಸಣ್ಣಪುಟ್ಟ ಝುರಿಗಳು ಕಣ್ಮನ ಸೆಳೆಯುತ್ತದೆ. ಆದರೆ, ಅಷ್ಟೇ ಅಪಾಯಕಾರಿ ಕೂಡಾ. ಇದನ್ನೆಲ್ಲ ಅರಿತಿರುವ ಸರ್ವೇ ಆಫ್ ಇಂಡಿಯಾ ಹಾಗೂ ಅರಣ್ಯ ಇಲಾಖೆ ಅವರು map 48ರ ಅಕ್ಕ ಪಕ್ಕದ ಭಾಗಗಳನ್ನು ಸಾರ್ವಜನಿಕರಿಗೆ ನೀಡುವುದನ್ನು ನಿಲ್ಲಿಸಿದ್ದಾರೆ. ರಕ್ಷಿತಾರಣ್ಯ ಎನ್ನಿಸಿರುವುದರಿಂದ ಹಾಗೂ ಕಾಡಿನ ಸಂಪತ್ತು ಲೂಟಿ ಮಾಡುವವರನ್ನು ಹತ್ತಿಕ್ಕಲು ಆ ಭಾಗದಲ್ಲಿ ಅರಣ್ಯ ಇಲಾಖೆ ಪಡೆ ಕಾವಲು ಕಾಯಬೇಕಾದ್ದರಿಂದ ಅನೇಕ ಬೆಟ್ಟ ತಪ್ಪಲಿಗೆ ಚಾರಣ ನಿಷೇಧಿಸಲಾಗಿದೆ.

ನಕ್ಸಲರ ಓಡಾಟವಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲ ಬೆಟ್ಟ ಗುಡ್ಡ ಅರಣ್ಯಗಳಲ್ಲಿ ಚಾರಣ ನಿಷೇಧಿಸಿ ಅನೇಕ ವರ್ಷಗಳಾಗಿದೆ. ಇನ್ನೂ ಅನೇಕ ಕಡೆ ಅರಣ್ಯ ಇಲಾಖೆ ಅನುಮತಿ ನೀಡಿದರೂ ನಿಗಿದಿತ ವೇಳೆಯಲ್ಲಿ ಅರಣ್ಯದ ಸರಹದ್ದು ದಾಟುವಂತೆ ಕಟ್ಟಪ್ಪಣೆ ವಿಧಿಸಲಾಗುತ್ತದೆ. ಆದರೆ, ಆಗುತ್ತಿರುವುದೇ ಬೇರೆ ಅರಣ್ಯದ ನಿಯಮ ಮುರಿಯುವುದರಲ್ಲಿ ಟ್ರೆಕರ್ಸ್ ಅಲ್ಲದೆ ಇಲಾಖೆಯ ಕೆಲವರು ನಿರ್ಲಕ್ಷ್ಯ ತೋರುತ್ತಿರುವುದು ಆಗಾಗ ಪ್ರಾಣಹಾನಿಗೆ ಎಡೆ ಮಾಡುತ್ತಿದೆ.

ಇದಕ್ಕೆ ಪರಿಹಾರವೇ ಇಲ್ಲವೆ? : ಮೊದಲಿಗೆ ಟ್ರೆಕ್ಕಿಂಗ್ ತಾಣಗಳನ್ನು ಗುರುತಿಸುವ ಅಗತ್ಯತೆ ಇದೆ. ಹಾಗೆ ಗುರುತಿಸಿದ ತಾಣಗಳಿಗೆ ಬೇರೆ ಯಾವ ಸೌಲಭ್ಯಗಳನ್ನು ಒದಗಿಸದೆ ಸೂಕ್ತ ಮಾರ್ಗದರ್ಶಿಯನ್ನು ಟ್ರೆಕರ್ಸ್ ಜೊತೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇದನ್ನು ಅರಣ್ಯ ಇಲಾಖೆ ಅಥವಾ ಸರ್ಕಾರ ನೇರವಾಗಿ ಅಥವಾ ಸರ್ಕಾರೇತರ ಸಂಸ್ಥೆಗಳ ಜೊತೆ ಕೈ ಜೋಡಿಸಿ ಒಂದು ವ್ಯವಸ್ಥೆ ರೂಪಿಸಬಹುದು. ಟ್ರೆಕ್ಕಿಂಗ್ ವೆಚ್ಚ, ಮೋಜು ಮಸ್ತಿಗೆ ಕಡಿವಾಣ ಎಲ್ಲವೂ ಮಾರ್ಗದರ್ಶಿಯ ಹೊಣೆಯಾಗಿರುತ್ತದೆ.

ವೃತ್ತಿಪರ ಟ್ರೆಕ್ ಸಂಸ್ಥೆಗಳ ಜೊತೆ ಹೋದರೆ ಸಂಸ್ಥೆಯೇ ನಿಮ್ಮ ಎಲ್ಲಾ ಜವಾಬ್ದಾರಿಯನ್ನು ಹೊರುತ್ತದೆ. ಹಾಗಾಗಿ ಹೆಚ್ಚಿನ ತೊಂದರೆ ಇರುವುದಿಲ್ಲ. ಆದರೆ, ವೈಯಕ್ತಿಕವಾಗಿ ಸ್ನೇಹಿತರ ಗುಂಪು ಕಟ್ಟಿಕೊಂಡು ಹೋಗಿ ಮದ್ಯಪಾನ, ಮೋಜಿನಾಟ ಮಾಡಬಯಸಿದರೆ ಕಷ್ಟ ಕಷ್ಟ. ಪ್ರತಿ ಟ್ರೆಕರ್ಸ್ ಗಳ ಹೆಸರು ನಮೂದಿಸಿ, ಶುಲ್ಕ ಪಡೆಯುವಾಗ ಅರಣ್ಯ ಇಲಾಖೆ ತೋರುವ ಆಸಕ್ತಿಯನ್ನು ಟ್ರೆಕರ್ಸ್ ಗಳಿಗೆ ಕಾಡಿನಲ್ಲಿ ಅಲೆದಾಡುವಾಗ ಪಾಲಿಸಬೇಕಾದ ಮುಂಜಾಗ್ರತೆ ಬಗ್ಗೆ ತೋರಿಸಿದರೆ ಹುಡುಗು ಬುದ್ಧಿಯ ಯುವಕರ ಪ್ರಾಣ ಮಾನ ತಪ್ಪಿಸಬಹುದು.

ಚಾರಣ ಮಾಡುವುದು ತಪ್ಪಲ್ಲ .ಆದರೆ, ಪೂರ್ವ ತಯಾರಿ ಇಲ್ಲದೆ, ಮಾರ್ಗದರ್ಶನವಿಲ್ಲದೆ ಹುಂಬತನದಿಂದ ಪ್ರಕೃತಿ ಜೊತೆ ಸೆಣಸಾಟಕ್ಕೆ ಇಳಿದರೆ ಅರಣ್ಯ ಇಲಾಖೆಯಾಗಲಿ, ಆರಕ್ಷಕರಾಗಲಿ ಏನೂ ಮಾಡಲಾಗದು. ಪರಿಸರ ಪ್ರಜ್ಞೆ ಪಾಠ ಕಲಿತು ನಂತರ ಕಾಡಿನಲ್ಲಿ ಕಾಲಿಡಿ.
[ಈ ಲೇಖನ ವಿಜಯಕರ್ನಾಟಕ Next ಪತ್ರಿಕೆಯಲ್ಲಿ ಫೆ. 10 ರಂದು ಪ್ರಕಟವಾಗಿದೆ]

Saturday 21 January 2012

ಜೇನುಕಲ್ ಗುಡ್ಡ ಚಾರಣಕ್ಕೂ ಮುನ್ನ...ಭಾಗ 2

ಜೇನುಕಲ್ ಗುಡ್ಡ ಚಾರಣಕ್ಕೂ ಮುನ್ನ...ಭಾಗ 1ಮುಂದುವರೆದುದು....
ಬಸ್ ಪುರಾಣ: ಯಾವುದೋ ಬಸ್ ಹತ್ತಿ ಇಳಿದು ನಾವು ಬುಕ್ ಮಾಡಿದ ಸೀಟು ಇದ್ದ ಬಸ್ ಹಿಡಿದು ಕೂತಿದ್ದಷ್ಟೇ ಗೊತ್ತು. ಗಂಟೆ ಎರಡು ಕಳೆದರೂ ಗೋಪಿ, ಶ್ರುತಿ, ಅಶ್ವಲ್, ನೂರು ವರ್ಷ ಹೊಸ್ತಿಲಲ್ಲಿದ್ದ ತಮ್ಮ ಕಂಪನಿ ಬಗ್ಗೆ ಅವಿರತವಾಗಿ ಹರಟೆ ಹೊಡೆಯುತ್ತಿದ್ದರು.

ನಾನು ಇವರ ಮಾತು ಮಾತಿನ ಸರಣಿ ಮುರಿಯಲು ಜೋರಾಗಿ ಆಕಳಿಸಿ, ಕೆಮ್ಮಿದ್ದು ಪ್ರಯೋಜನಕ್ಕೆ ಬರಲಿಲ್ಲ. ಮುಂದಿನ ಸೀಟಿನಲ್ಲಿ ಕೂತಿದ್ದ ತ್ರಿಮೂರ್ತಿಗಳಾದ ರವಿ, ಪುಂಡಿ, ಕಿಟ್ಟು ಸೈಲೆಂಟ್ ಗೆ ಶರಣಾಗಿದ್ದರು. ನಾನು ಹಾಸನ ಆದಮೇಲೆ ನಿದ್ದೆ ಮಾಡಲು ಯತ್ನಿಸಿದೆ ಆದ್ರೆ, ಬೇಲೂರಿನ ನಂತರ ಕಣ್ಣು ಮುಚ್ಚಿ ಕೂರುವುದಿರಲಿ, ಸೀಟಿನಲ್ಲಿ ಕ್ಷಣಕಾಲ ತಳವೂರಲು ಆಗಲಿಲ್ಲ. ಡ್ರೈವರ್ ಗೆ ಏನು ಅರ್ಜೆಂಟ್ ಕೆಲ್ಸ ಇತ್ತೋ ಗೊತ್ತಿಲ್ಲ. ಯರ್ರಾಬಿರ್ರಿ ಗಾಡಿ ಓಡಿಸುತ್ತಿದ್ದ. ಅವನ ವೇಗಕ್ಕೆ ತಕ್ಕಂತೆ ರಸ್ತೆ ಕೂಡಾ ತಾಳ ಹಾಕುತ್ತಿತ್ತು.

5.45ಕ್ಕೆ ಮೂಡಿಗೆರೆ ಬಸ್ ನಿಲ್ದಾಣ ಬಳಿ ಇಳಿದಾಗ ಚಳಿ ನಮ್ಮನ್ನು ತಬ್ಬಿಕೊಂಡು ಸ್ವಾಗತಿಸಿತ್ತು. ಪಕ್ಕದಲ್ಲಿದ್ದ ಸಣ್ಣ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಮನಸ್ಸಾಯ್ತು. ಆದರೆ, ಅದಕ್ಕೂ ಮುನ್ನ ವಿಸ್ಮಯ ಪ್ರತಿಷ್ಠಾನದ ಬಾಪು ದಿನೇಶ್ ಹಾಗೂ ಮಗ್ಗಲಮಕ್ಕಿ ಗಣೇಶ್ ಗೆ ಕಾಲ್ ಮಾಡಿ ಅವರ ಸುಖ ನಿದ್ರೆ ಹಾಳು ಮಾಡಿ ನಮ್ಮನ್ನು ಹೊತ್ತೊಯ್ಯುವ ಡ್ರೈವರ್ ಬಗ್ಗೆ ವಿಚಾರಿಸಿದೆ.

ಎಲ್ಲರೂ ಇಡ್ಲಿ..ಕಾಫಿ ತಿನ್ನುತ್ತಾ ಬಿಳಿ ಕಲರ್ ಸುಮೋ ಗಾಡಿ ನಿರೀಕ್ಷೆಯಲ್ಲಿದ್ದೆವು. ಆ ಬಂದಿದ್ದೆ ಬಿಳಿ ಬಣ್ಣದ ಟಾಟಾ ಸುಮೋ ಮತ್ತದರ ಚಾಲಕ ದಿ ಗ್ರೇಟ್ ಎಂಟರ್ ಟೈನರ್ ಜೂಲಿಯನ್ ಫರ್ನಾಂಡಿಸ್. ಮೂಡಿಗೆರೆಯ ಅಘೋಷಿತ ವಕ್ತಾರನಂತಿರುವ ಐದೂವರೆ ಅಡಿಯ ಎತ್ತರದ ಗುಂಡನೆ ದೇಹಾಕೃತಿ ಜೊತೆ ಮಾತಿಗಿಳಿದರೆ ಹೊತ್ತು ಹೋಗುವುದೇ ಗೊತ್ತಾಗುವುದೇ ಇಲ್ಲ.

ಮೂಡಿಗೆರೆಯ ಬದಲಾಗುತ್ತಿರುವ ವಾತಾವರಣ, ಎಸ್ಟೇಟ್ ಓನರ್ ಗಳು, ಹೈಟೆಕ್ ಕೂಲಿಗಳು, ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರು.. ಹೀಗೆ ಪುಂಖಾನುಪುಂಖವಾಗಿ ಆತ ಹೇಳುತ್ತಿದ್ದರೆ ಮುಂಜಾನೆ ಆಕಾಶವಾಣಿ ಭದ್ರಾವತಿ ಸ್ಟೇಷನ್ ವಾರ್ತಾ ಪ್ರಸಾರ ನೆನಪಾಗುತ್ತಿತ್ತು. ಹಿಂಬದಿ ಕೂತಿದ್ದ ನನ್ನ ನಿದ್ದೆಯನ್ನು ಆತನ ಡೈಲಾಗ್ ಗಳು ಬಡಿದೆಬ್ಬಿಸುತ್ತಿತ್ತು.

ಹಳೆ ಮೂಡಿಗೆರೆ ಹತ್ತಿರ ಡಬಲ್ ಸ್ಟಾರ್ ಮನೆ ಎಂದರೆ ಎಲ್ಲರಿಗೂ ಗೊತ್ತು. ಅಲ್ಲಿ ಬಂದು ಫರ್ನಾಂಡೀಸ್...ಜೂಲಿಯನ್ ಫರ್ನಾಂಡೀಸ್ ಎಂದರೆ ಯಾರೋ ಬೇಕಾದರೂ ಮನೆ ತೋರಿಸುತ್ತಾರೆ. ಒಬ್ಬ ಮಗಳು, ಒಬ್ಬ ಮಗ..ಮಗ ಕಾಲೇಜಿನಲ್ಲಿ ಲೆಕ್ಚರರ್..ಮಗಳು ..ಓದಿದ್ದಾಳೆ.. ಈಗ ಮನೆಗೆ ಬಂದಿದ್ದಾಳೆ..ಎರಡನೇ ಮಗು ಎಕ್ಸ್ ಪೆಕ್ಟ್ ಮಾಡ್ತಾ ಇದ್ದಾಳೆ.

ಕ್ರಿಸ್ ಮಸ್ ಗೆ ಬಂದಿದ್ದು ಅವಳು...ನ್ಯೂ ಇಯರ್ ಡೇ ಭರ್ಜರಿಯಾಗಿ ಸೆಲೆಬ್ರೇಟ್ ಮಾಡ್ತೀವಿ. ಹಬ್ಬ ಅಂದ್ರೆ ಎಲ್ಲಾ ಇಲ್ಲಿಗೆ ಬಂದುಬಿಡ್ತಾರೆ. ಆದರೆ ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ.ಈಗ ಸ್ವಲ್ಪ ಕಣ್ಣಿನ ಪ್ರಾಬ್ಲಂ ಆಗಿತ್ತು. ಆಪರೇಷನ್ ಮಾಡಿಸಿಕೊಂಡಿದ್ದೀನಿ.

ಬರೀ ಇಲ್ಲೆ ಓಡಿಸುತ್ತೀನಿ ಅಷ್ಟೇ .. ಜಾಸ್ತಿ ದೂರ ಹೋಗೋಲ್ಲ. ಹೆಚ್ಚೆಂದರೆ ಈ ಕಡೆ ಮಂಗಳೂರು.. ಆ ಕಡೆ ಚಿಕ್ಕಮಗಳೂರು ಕಡೆ ಓಡಿಸ್ತೀನಿ ಅಷ್ಟೇ. ಎಂದು ಹೇಳಿದವನು ಕೆಲ ಕಾಲ ಸುಮ್ಮನಾದ..ಆಮೇಲೆ ಮೆಲ್ಲಗೆ ನಿಮ್ಮಲ್ಲಿ ಯಾರಾದರೂ ಡ್ರಿಂಕ್ಸ್ ಮಾಡ್ತೀರಾ ಎಂದ. ಇದು ಯಾವ ರೀತಿ ಆಫರ್ ಬೆಳ್ಳಂಬೆಳ್ಳಗೆ ಎಂದು ನಮ್ಮಲ್ಲಿ ಕೆಲವರಿಗೆ ಅನ್ನಿಸಿತು.

ಹೂಂ..ಹಾ.. ಅನ್ನುತ್ತಿದ್ದಂತೆ ಉತ್ತೇಜನಗೊಂಡ ಫರ್ನಾಂಡೀಸ್ ಮತ್ತೆ ಮಾತು ಶುರು ಮಾಡ್ಕೊಂಡ. ಒಂದ್ಸಾರಿ ಏನಾಯ್ತು ಗೊತ್ತಾ.. ಇಲ್ಲೇ ನಮ್ಮ ಜಾವಳಿ ಕಡೆ ಸಾವಕಾರ ಮಗ ಮತ್ತೆ ಅವನ ಫ್ರೆಂಡ್ರು ಮಂಗಳೂರಿಗೆ ಕರ್ಕೋಂಡು ಹೋಗಿ ಬರ್ಬೇಕಿತ್ತು. ಊರು ಬಿಟ್ಟು ಸ್ವಲ್ಪ ದೂರ ಹೋಗುತ್ತಿದ್ದಂತೆ.. ಅಂಕಲ್ ಅಂದ ಸಾಹುಕಾರರ ಮಗ,
ನಾನು ಓಡಿಸ್ಲಾ ಗಾಡಿ ಎಂದ
೨೦ ವರ್ಷದಿಂದ ಗಾಡಿ ಓಡಿಸ್ತೀದಿನಿ ಸಾರ್...ಒಮ್ಮೆ ಕೂಡಾ ಬೇರೆ ಅವರಿಗೆ ಗಾಡಿ ಕೊಟ್ಟಿಲ್ಲ. ಆದ್ರೆ ಕೇಳ್ತಾ ಇರೋದು ಸಾಹುಕಾರರ ಮಗ ಎನ್ ಮಾಡೋಡೂ
ಧೈರ್ಯ ಮಾಡಿ ಕೊಟ್ಟೆ....
ಆದ್ರೆ ಆನಾಹುತ ಆಗ್ಬಿಡ್ತು..ನಮ್ ಸಾಹುಕಾರರ ಮಗ ಮರಕ್ಕೆ ಹೋಗಿ ಗುದ್ದು ಬಿಟ್ಟ.

ಫುಲ್ ಟೆನ್ಷನ್ ಆಗಿಬಿಡ್ತು..ಅವತ್ತೇ ಡಿಸೈಡ್ ಮಾಡಿದೆ ಯಾರಿಗೂ ಗಾಡಿ ಕೊಡ್ಬಾರ್ದು ಅದರಲ್ಲೂ ಕುಡಕರಿಗೆ ..

ನೀವು ಡ್ರಿಂಕ್ಸ್ ಮಾಡೊಲ್ವ..
ನಾನು ಡ್ರಿಂಕ್ಸ್ ಮಾಡ್ತೀನಿ ಸಾರ್ ಆದ್ರೆ ಮನೆಯಲ್ಲಿ ಫ್ಯಾಮಿಲಿ ಎಲ್ಲಾ ಸೇರಿದ್ರೆ ಮಾತ್ರ
ಆದರೆ, ಡ್ರಿಂಕ್ಸ್ ಮಾಡಿ ಎಂದು ಗಾಡಿ ಓಡಿಸಲ್ಲ.
ಆ ಹುಡುಗರ ಕಥೆ ಏನಾಯ್ತು
ಸಾಹುಕಾರರು ಬಂದ್ರು ಅವರ ಮಗನ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು. ಬೇರೆ ಕಾರಲ್ಲಿ ಬಂದು ಕರೆದುಕೊಂಡು ಹೋದ್ರು
ನಾನು ಗಾಡಿ ರಿಪೇರಿ ಮಾಡಿಸಿಕೊಂಡು ಆಮೇಲೆ ಬಂದೆ...

ಅಷ್ಟರಲ್ಲಿ ಮೂಡಿಗೆರೆ ಬಿಟ್ಟು ಸುಮಾರು ೨೦ ಕಿ.ಮೀ ದಾಟಿದ್ವಿ..ಹಿಂದೆ ಸೀಟಲ್ಲಿ ಕೂತು ತೂಕಡಿಸುತ್ತಿದ್ದ ನಂಗೆ ಎಚ್ಚರವಾಗುವಷ್ಟು ರಸ್ತೆ ಹಾಳಾಗಿತ್ತು. ಥೂ ಏನ್ ರಸ್ತೇನೋ ಎಂದು ನನ್ನ ಬಾಯಲ್ಲಿ ಬರುವಷ್ಟರಲ್ಲಿ
ಫರ್ನಾಂಡೀಸ್ ಸಾಹೇಬ್ರ ಮಾತಿನ ಓಟ ರಸ್ತೆಗೆ ಇಳಿದುಬಿಟ್ಟಿತು.

ಸ್ವಲ್ಪ ದೂರ ಅಷ್ಟೇ ಹೀಗೆ ಮುಂದೆ ಒಂದು ಅದ್ಭುತ ರಸ್ತೆ ನೋಡ್ತೀರಾ ನೀವು ಹೇಗೆದೆ ಗೊತ್ತಾ ಅದು?

ಅತ ಹೇಳಿದ ರೇಂಜ್ ನೋಡಿದರೆ ನೈಸ್ ರಸ್ತೆ ಥರಾ ಮೂಡಿಗೆರೆ ಸಕಲೇಶಪುರ ಲಿಂಕ್ ರಸ್ತೆ ಏನಾದರೂ ಇರಬಹುದು ಅನ್ನಿಸಿತ್ತು.

ಆದರೆ, ಹತ್ತಿರ ಹತ್ತಿರವಾದಂತೆ ಕಣ್ಣರಳಿ ಎಡಬಲ ನೋಡ ತೊಡಗಿದೆವು. ಆ ರೋಡ್ ನಮ್ಮ ಎಡಕ್ಕೆ ಇತ್ತು ಅದನ್ನು ಹಾದು ಮುಂದಕ್ಕೆ ಹೋದ್ವಿ..

ಎಲ್ಲಿ ರೋಡ್ ಎಂದು ಸ್ವಲ್ಪ ಮುಂದೆ ಹೋದ ಮೇಲೆ ಕೇಳಿದ್ದಕ್ಕೆ ಅಲ್ಲೇ ಎಡ ಕಡೆ ಹೋಯ್ತಲ್ಲ ಸಾರ್.. ಅದೇ ಅಂದ ನಮಗೆ ನಗಬೇಕೋ ಬೆಳ್ಳಂಬೆಳ್ಳಗೆ ಮಾತಿನ ಝರಿ ಹರಿಸುತ್ತಿದ್ದ ಫರ್ನಾಂಡೀಸ್ ಗೆ ಬೈಯಬೇಕೋ ತಿಳಿಯದೇ ಓಹ್ ಹೌದಾ ಎಂದು ಉದ್ಗಾರ ತೆಗೆದು ಸುಮ್ಮನಾದೆವು. ಏಕೆಂದರೆ ಆ ರಸ್ತೆ ಪರಿಸ್ಥಿತಿ ನಮ್ಮ ಕುತೂಹಲವನ್ನು ಅಣಕಿಸುವಂತ್ತಿತ್ತು.

ಮತ್ತೆ ತನ್ನ ಮನೆ ಕಥೆ ಹೇಳಲು ಪ್ರಾರಂಭಿಸಿದ ಫರ್ನಾಂಡೀಸ್ ಮುನ್ನೂರ್ ವರ್ಷ ಹಳೆಯದಾದ ಮನೆ, ಲೆಕ್ಚರರ್ ಕೆಲ್ಸ ಮಾಡೋ ಮಗ, ನರ್ಸಿಂಗ್ ಓದಿರೋ ಮಗಳು, ಪತ್ನಿಯ ಅಗಲಿಕೆ, ವಾಹನ ಪ್ರೀತಿ.. ಹೀಗೆ ಎಲ್ಲವನ್ನೂ ಸೀಮಿತ ಅವಧಿಯಲ್ಲೇ ನಮ್ಮ ಮುಂದಿಟ್ಟಿದ್ದ.

ಸುಮಾರು 1 ಗಂಟೆಕಾಲ ನಮ್ಮ ರಂಜನೆ ಮಾಡಿದ ಫರ್ನಾಂಡೀಸ್ ಮರೆಯಲು ಸಾಧ್ಯವಿದ್ದಂತೆ ನಮ್ಮ ಮನಸ್ಸಿನಲ್ಲಿ ಹೊಕ್ಕಿಬಿಟ್ಟ. ಮತ್ತೊಮ್ಮೆ ಫರ್ನಾಂಡೀಸ್ ಗೆ ವಿಷ್ ಮಾಡಿ ಬೀಳ್ಕೊಟ್ಟೆವು.

Monday 2 January 2012

New Year 2012 Beach Trek


Model: Girish Andalagi, Photo taken at Apsarakonda Beach, Kumta
Model: Girish Andalagi, Photo taken at Apsarakonda Beach, Kumta


ಉಳಿದ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ